ಪ್ರತಿ ವರ್ಷ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಸೆಕೆಂಡ್ ಪಿಯುಸಿ ಮುಗಿಸಿದ ನಂತರ ಎಂಜಿನಿಯರಿಂಗ್, ಮೆಡಿಕಲ್ ಪ್ರವೇಶ ಪಡೆಯಬೇಕೆಂದು CET, NEETನಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಾರೆ.
ಈ ಶುಕ್ರವಾರ `ಸ್ಕ್ಯಾಮ್ 1770` ಚಿತ್ರವೂ ಸ್ಪರ್ಧಾತ್ಮಕ ಪರೀಕ್ಷೆಗಳ ಸುತ್ತ ನಡೆಯುವ ಹಗರಣಗಳ ಕಥೆಯನ್ನು ಹೇಳುತ್ತದೆ.
ನೀಟ್ಗೆ ತಯಾರಾಗುತ್ತಿರುವ ಟಿ (ರಂಜನ್) ಎಂಬ ಯುವಕನ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಉತ್ತಮ ರ್ಯಾಂಕಿಂಗ್ ಪಡೆದರೂ ಸಹ ಆತನಿಗೆ ಹಲವಾರು ಕಾರಣಗಳಿಂದ ಸೀಟ್ ಸಿಗುವುದಿಲ್ಲ. ಆತನ ಸ್ನೇಹಿತೆ ಅಮೃತಾ ಅಲಿಯಾಸ್ ಅಮ್ಮುಗೆ ಕೂಡ ಅರ್ಹತೆ ಇದ್ದರೂ ಇದೇ ಕಾರಣದಿಂದ ಸೀಟ್ ವಂಚಿತಳಾಗುತ್ತಾಳೆ. ಈ ಸೀಟ್ ಹಂಚಿಕೆ ಪ್ರಕರಣದ ಹಿಂದೆ ವ್ಯವಸ್ಥಿತವಾಗಿ ನಡೆಯುವ ಅವ್ಯವಹಾರಗಳು, ಹಗರಣಗಳ ಸರಮಾಲೆಯನ್ನು ಟಿ ಪತ್ತೆ ಹಚ್ಚುತ್ತಾನೆ. ಇದು ಯಾವ ರೀತಿಯ ಅವ್ಯವಹಾರ ಮತ್ತು ಈ ಎಲ್ಲದರ ಹಿಂದೆ ಯಾರ್ಯಾರಿದ್ದಾರೆ ಎಂಬುದನ್ನು ಸ್ಕ್ಯಾಮ್ 1770 ಚಿತ್ರ ರೂಪಿಸುತ್ತದೆ.
ಈ ಹಿಂದೆ ನಿರ್ಮಾಪಕ ಟಿ. ದೇವರಾಜ್ ಅವರು ಸಾಮಾಜಿಕ ಅವ್ಯವಸ್ಥೆಯ ಕುರಿತಾದ ಕಥೆ ಹೊಂದಿದ್ದ `ಆಕ್ಟ್ 1978` ಮತ್ತು `19.20.21`. ಇಂಥ ಚಿತ್ರಗಳನ್ನೇ ಮಾಡಿಕೊಂಡು ಬಂದವರು. ಅವರೀಗ ಸ್ಪರ್ಧಾತ್ಮಕ ಪರೀಕ್ಷೆಗಳ ಸುತ್ತ ನಡೆಯುತ್ತಿರುವ ದೊಡ್ಡ. ಸ್ಕ್ಯಾಮ್ ಬಗ್ಗೆ ಚಿತ್ರ ಮಾಡಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಆ್ಯಕ್ಟ್ 1970 ಇಡೀ ಚಿತ್ರ ಈಗಿನ ಶಿಕ್ಷಣ ವ್ಯವಸ್ಥೆಯ ಸುತ್ತ ಸುತ್ತುತ್ತದೆ
ಅಲ್ಲದೆ ಕೆಲವೇ ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿರುವ ಶಿಕ್ಷಣ ವ್ಯವಸ್ಥೆಯು ಅಮಾಯಕ ವಿದ್ಯಾರ್ಥಿಗಳ ಜೀವನದೊಂದಿಗೆ
ಹೇಗೆಲ್ಲಾ ಆಟವಾಡುತ್ತದೆ. ಶಿಕ್ಷಣದ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹೇಗೆ ವಂಚಿತರಾಗುತ್ತಾರೆ ಮತ್ತು ಲಾಭದ ಆಸೆಯಿಂದ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಹೇಗೆ ಇಂಥ ಜಾಲದ ಜೊತೆ ಕೈಜೋಡಿಸಿವೆ ಎಂಬುದನ್ನು ಈ ಚಿತ್ರದಲ್ಲಿ ಸವಿವರವಾಗಿ ಹೇಳಲಾಗಿದೆ.
ಸ್ಕ್ಯಾಮ್ 1770. ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಅವರ ಪೋಷಕರು ನೋಡಲೇಬೇಕಾದ ಚಿತ್ರವಾಗಿದೆ. ತಮ್ಮ ಮಕ್ಕಳಿಗೆ ಮೆಡಿಕಲ್, ಎಂಜಿನಿಯರಿಂಗ್ ಸೀಟು ಸಿಗಬೇಕೆಂಬ ಆಸೆಯಿಂದ ಎಲ್ಲ ಹಂತಕ್ಕೂ ಹೋಗುವ ಪ್ರತಿಯೊಬ್ಬ ಪೋಷಕರಿಗೂ ಈ ಚಿತ್ರ ಒಂದು ಉತ್ತಮ ಪಾಠವಾಗಿದೆ. ಪಾಲಕರು ಮತ್ತು ವಿದ್ಯಾರ್ಥಿಗಳಷ್ಟೇ ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯು ಬದಲಾಗುತ್ತಿರುವ ರೀತಿಯ ಬಗ್ಗೆಯೂ ಹೇಳುವ ಮೂಲಕ ಈ ಚಿತ್ರ. ಕಣ್ಣು ತೆರೆಸುತ್ತದೆ.
ಚಿತ್ರದ ಪ್ರಥಮಾರ್ಧ ಚಕಚಕನೇ ಸಾಗುತ್ತದೆ. ಆದರೆ ದ್ವಿತೀಯಾರ್ಧ ಸ್ವಲ್ಪ ನಿಧಾನ ಎನಿಸುತ್ತದೆ. ಅಲ್ಲದೆ ಅನೇಕ ಪ್ರಶ್ನೆಗಳಿಗೆ ಚಿತ್ರದ ಕೊನೆವರೆಗೆ ಉತ್ತರ ಸಿಗದೆ ಪ್ರಶ್ನೆಗಳಾಗೇ ಉಳಿದಿವೆ. ನಿರ್ದೇಶಕರು ಆರಂಭದಿಂದಲೂ ಸಸ್ಪೆನ್ಸ್ ಕಾಯ್ದುಕೊಂಡಿದ್ದರೂ, ಹಗರಣದ ಹಿಂದಿನ ಮಾಸ್ಟರ್ ಮೈಂಡ್ ಯಾರೆಂಬುದನ್ನು ಪ್ರೇಕ್ಷಕ ಸುಲಭವಾಗಿ ಊಹಿಸಬಹುದು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಮೂಲಕ ಖ್ಯಾತಿ ಗಳಿಸಿದ ರಂಜನ್ ಸ್ಕ್ಯಾಮ್ 1770 ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನ ಪಾತ್ರವನ್ನು ನಿಭಾಯಿಸಿದ್ದಾನೆ. ತನ್ನ ಪಾತ್ರಕ್ಕೆ ನ್ಯಾಯ ಒದಗಿ ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ. ತೆರೆಯಮೇಲೆ ಹಿರಿಯನಟಿ ಹರಿಣಿ, ರಾಘು ಶಿವಮೊಗ್ಗ, ಸಂದೀಪ್, ರಮೇಶ್ ಪಂಡಿತ್, ಬಿ ಸುರೇಶ, ನಟನಾ ಪ್ರಶಾಂತ್, ಶ್ರೀನಿವಾಸ ಪ್ರಭು ಎಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅವಿನಾಶ್ ರಂಥ ಪ್ರತಿಭಾವಂತ ನಟರನ್ನು ಸರಿಯಾಗಿ ಬಳಸಿಕೊಂಡಿಲ್ಲ, ಅವರು ಕೊನೆಯ ದೃಶ್ಯದಲ್ಲಿ ಮಾತ್ರ ಬರುತ್ತಾರೆ.
ಚಿತ್ರದ ಕೊನೆಯವರೆಗೂ 1770 ಎಂಬ ಸಂಖ್ಯೆಗೆ ಚಿತ್ರದ ಕಥೆಯಲ್ಲಿ ಯಾವುದೇ ಸ್ಪಷ್ಟ ಅರ್ಥವಿಲ್ಲ. ಚಿತ್ರದ ಶೀರ್ಷಿಕೆಗೂ, ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲ. ಆದರೂ ಇಂಥ ಚಿತ್ರ ಮಾಡಲು ನಿರ್ದೇಶಕರು ಸಾಕಷ್ಟು ಎಫರ್ಟ್ ಹಾಕಿರುವುದು ಚಿತ್ರದಲ್ಲಿ ಎದ್ದು ಕಾಣುತ್ತದೆ.